ಶುಕ್ರವಾರ, ಡಿಸೆಂಬರ್ 23, 2011

ಕವಿಯಲ್ಲ ನಾನು...ಭಾವ-ಸ್ಪರ್ಶ ಜೀವಿ...

ಕವಿಯಲ್ಲ ನಾನು...ಭಾವ-ಸ್ಪರ್ಶ ಜೀವಿ...

ಕವಿ ಕವಿ ಕವಿ ಎಂದು
ಕಿವಿ ತುಂಬದಿರಿ ಮನಗಳೆ
ನಾನಿನ್ನೂ ಕೇಳಬೇಕು
ಜುಳು ಜುಳಿಸುವ ನೀರನು,
ಸುಯ್ ಗುಡುವ ಗಾಳಿಯ,
ಚಿಲಿಪಿಲಿಸುವ ಹಕ್ಕಿಗಳ,
ನಿನಾದಿಸುವ ದೈವ ಘಂಟೆಗಳ,
ಅವಳು ಗುನು-ಗುನಿಸುವ ಹಳೆಯ ಹಾಡುಗಳ...

ಕವಿ ಕವಿ ಕವಿ ಎಂದು
ಶಾಲು ಹೊದಿಸದಿರಿ ಮನಗಳೆ
ನಾನಿನ್ನೂ ಸ್ಪರ್ಶಿಸಿ ನೋಡಬೇಕು
ಬೆಳಗಿನ ಬಿಸಿ ಬಿಸಿ ಎಳೆಬಿಸಿಲನು,
ಎಲೆಯ ಮೇಲೆ ಮೈಕಾಸುವ ಇಬ್ಬನಿಯ ತಂಪನು,
ಎಲ್ಲಿದೆ ಎಂದು ಹುಡುಕಿಸುವ ಮಂಜಿನ ತಂಪನು,
ಕರ್ಪೂರದಾರತಿಯ ಬಿಸಿಯನು,
ಭಾವ ತುಂಬಿದ ಅವಳ ಬಿಸಿಯಂತರಂಗವನು...

ಕವಿ ಕವಿ ಕವಿ ಎಂದು
ಮೂಗು ಹಿಡಿದು ಉಸಿರ ಕಟ್ಟದಿರಿ ಮನಗಳೆ
ನಾನಿನ್ನೂ ಅನುಭವಿಸಬೇಕು
ಘಮ ಘಮಿಸುವ ಮಲ್ಲಿಗೆಯ,
ಅಮ್ಮನ ಬಿಸಿ ಸಾರಿನ ಕಂಪಿನಲೆಯ,
ಹನಿ ಹನಿಗೆ ತೊಯ್ದ ಮಣ್ಣಿನ ವಾಸನೆಯ,
ನನ್ನದೆನ್ನಿಸುವ ಶ್ರೀಗಂಧದ ಸುಗಂಧವ,
ಅವಳೆನ್ನಿಸುವ ಅವಳ ಹತ್ತಿರದ ಪರಿಮಳವ...

ಕವಿ ಕವಿ ಕವಿ ಎಂದು

ಎನ್ನ ಬಾಯಿ ಕಟ್ಟದಿರಿ ಮನಗಳೆ
ನಾನಿನ್ನೂ ಸವಿಯಬೇಕು
ನನ್ನಮ್ಮನ ಕೈತುತ್ತಿನ ಅನ್ನವ,
ಹೀರಿ ಕೂಡಿಟ್ಟ ಸಿಹಿ ಜೇನು ತುಪ್ಪವ,
ಬಾಯಾರಿದಾಗ ಸಿಹಿ ಕಾವೇರಿಯ ಮುದವ,
ಭಕ್ತಿ ತುಂಬಿದ ದೈವ ತೀರ್ಥ ಪ್ರಸಾದವ,
ಮರೆಯದ ಅವಳ ಮುತ್ತಿನ ಮರೆಯ ಮಧುವ..

ಕವಿ ಕವಿ ಕವಿ ಎಂದು
ಎನ್ನ ಕಣ್ಣು ಕಟ್ಟದಿರಿ ಮನಗಳೆ
ನಾನಿನ್ನೂ ನೋಡಬೇಕು
ಕತ್ತಲನು, ಅದ ಗರ್ಭದ ಬೆಳಕನು,
ಇಳೆಯು ಹೊದ್ದ ಕಣ್ತಣಿಸುವ ಹಸಿರನು,
ನನ್ನ ಮೊಗಕಂಟಿದ, ಆ ನಿಮ್ಮ ನಗುವನು,
ನಾನರಿಯದ ಭಕ್ತಿ ದಾರಿಯ ಸೊಬಗನು,
ಕಣ್ಮುಚ್ಚಿದರು ಕಣ್ಮುಂದೆ ಬರುವ ಅವಳ ಬಣ್ಣವನು...

ಕವಿ ಕವಿ ಕವಿ ಎಂದು
ಕೈಕಟ್ಟಿ ನಿಲ್ಲಿಸದಿರಿ ಮನಗಳೆ
ನಾ ಬರೆಯಲೆಬೇಕು
ಒಮ್ಮೆಲೇ ಬಂದು ಬೀಳುವ ಕನಸುಗಳ,
ಕೊನೆಯಿರದ ಕಣ್ಣಿಗೆ ಕಾಣದ ಕಲ್ಪನೆಗಳ,
ನನ್ನವರ ಕುರಿತು ಕಂಡ ಆಶಯಗಳ,
ಅದಮ್ಯ ಶಕ್ತಿಯ ಸ್ಫೂರ್ತಿ ಚಿತ್ರಗಳ,
ನೋವುಂಡ ಮನಗಳ ಔಷಧಿ ಚೀಟಿಗಳ...

ರುದ್ರಪ್ಪ...



ಭಾವದ ದೃಷ್ಟಿಕೋನ: ನಾನೊಬ್ಬ ಕವಿ ಎಂದು ಕವಿಯಾಗುವ ಮುನ್ನವೇ ಕರೆಸಿಕೊಂಡು ಬೀಗುವದು ಮನೆಯ ಹೊಸ್ತಿಲಲ್ಲೇ ಎಡವಿ ಬಿದ್ದಂತೆ. ಕರೆಯುವವರು ಕರೆಯಲಿ, ಅದೇ ಕಿವಿ ತುಂಬಿದರೆ, ನಾವು ಕೇಳಬೇಕಿರುವದು ಕೇಳುವದಿಲ್ಲ, ಕಣ್ಣು ಕಟ್ಟಿದರೆ ನೋಡಬೇಕಿರುವದು ಕಾಣಿಸೋಲ್ಲ, ಕೈ ಕಟ್ಟಿದರೆ ಸ್ಪರ್ಶಿಸಬೇಕಾಗಿದ್ದು ಮುಟ್ಟಲು ಆಗುವದಿಲ್ಲ, ಉಸಿರುಗಟ್ಟಿದರೆ ಸುತ್ತಲೂ ಪರಿಮಳವಿದ್ದರೂ ಗುರುತಿಸಲಾಗುವದಿಲ್ಲ, ಇದೆಲ್ಲದರಿಂದ ಭಾವ ಒಡೆದು ಹೊರಬರದಿರೆ ಎಷ್ಟು ಬರೆದರೂ ಅದು ಕವಿತೆಯಾಗೋಲ್ಲ... 
ಸ್ವಲ್ಪ ಇದರ ಸ್ಫೂರ್ತಿಯ ಬಗ್ಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ : ನನ್ನ ಮಿತ್ರನೊಬ್ಬ ವಿದೇಶದಿಂದ ಮರಳಿ ಬಂದ. ನನ್ನ ಕವಿತೆಗಳ ಕಾಲೇಜು ದಿನಗಳಿಂದ ಓದಿ ನಿಯತ್ತಿನ ನಿಷ್ಟುರ ವಿಮರ್ಶೆ ಮಾಡಿ ಬರವಣಿಗೆ ಬೆನ್ನು ತಟ್ಟಿದವರಲ್ಲಿ ಒಬ್ಬ. ಮೊನ್ನೆ ಮಾತಾಡುವಾಗ " ಈ ವರ್ಷದ ನಿನ್ನ ಸಾಧನೆ ಕವಿಯಾಗಿ ಪರಿವರ್ತನೆ ಆಗಿದ್ದು, ಕವಿ ಪುಂಗವ ಕವಿ ಸಾಮ್ರಾಟ... (ಮತ್ತೇನೇನೋ ಹೇಳಿದ್ದ , ನಾ ಕಿವಿ ಮುಚ್ಚಿಕೊಂಡಿದ್ದೆ) ಜಹಾಪನಾ ತೊಫಾ ಕಬೂಲ್ ಕರೋ" ಎಂದ. ಆಗ ಸ್ವಲ್ಪ ಮುಜಗರವೆನಿಸಿದರು ಮುಕ್ತವಾಗಿ "ನಾನೇನು ಕವಿಯಲ್ಲ ಇನ್ನು ಚಿಕ್ಕ ಬರಹಗಾರ" ಎಂದೆ, ಆಮೇಲೆ ವಿಷಯ ಬದಲಾಯಿತು,,, ಮನೆಗೆ ಬಂದ ಮೇಲೆ ನಾ ಏಕೆ ಕಿವಿ ಮುಚ್ಚಿಕೊಂಡೆ ಎಂದು ಸ್ವಲ್ಪ ವಿಚಾರ ಮಾಡಿದೆ, ಇದರ ಬಗ್ಗೆ ಬರೆಯಬೇಕೆನಿಸಿತು ... ಸ್ವಲ್ಪ ಹೊತ್ತಿನಲ್ಲಿ ೫ ಚರಣಗಳ ಪಂಚ ಇಂದ್ರಿಯಗಳ ಜ್ಞಾನಕ್ಕೆ ಸಮ ಮಾಡಿ ಬರೆದು ಮಲಗಿದೆ, ಬೆಳಗ್ಗೆ ಎದ್ದು ಕಚೇರಿಯ ವಾಹನ ಹತ್ತಿ ಕೂತಾಗ ಏಕೋ ನಿದ್ದೆ ಬರದೆ ಬರೆದ ಸಾಲುಗಳ ಬಗ್ಗೆ ಮೊಬೈಲಿನಲ್ಲಿ ತೆಗೆದು ಮತ್ತೊಮ್ಮೆ ಓದಿದೆ, ಮುದವೆನಿಸಿತು... ಆದರೆ ಕೊನೆಯ ಸಾಲುಗಳು "ಎಲ್ಲೋ ಏನೋ ಉಳಿದಿದೆ ವಿಚಾರ ಮಾಡು" ಎನ್ನುತ್ತಿದ್ದವು. ತಲೆಗೆ ವಿಚಾರ ಬಂತು, ಭಾವ ಜೀವಿ ಬರಹಗಾರನಿಗೆ ಪಂಚೇಂದ್ರಿಯಗಳ ಬಿಟ್ಟು ಇನ್ನೊಂದು ಅತೀಂದ್ರಿಯ ಶಕ್ತಿ ಇರುತ್ತದೆ. "ಬರೆಯಬೇಕೆಂಬ ಹಂಬಲ". ಅದನ್ನು ಕೂಡ ಆರನೇ ಚರಣದಲ್ಲಿ ನಿಯಮಿಸಿ ಇಳಿಸಿಬಿಟ್ಟೆ. ಆಗ ಸ್ವಲ್ಪ ಸಮಾಧಾನವಾಯಿತು.

1 ಕಾಮೆಂಟ್‌:

ಮೌನರಾಗ ಹೇಳಿದರು...

ನಿಜದ ಮಾತು ಸರ್..
ನಾನಿನ್ನು ಕಲಿಯಬೇಕು ಎಂಬ ಉತ್ಸಾಹವೇ ಒಬ್ಬ ಬರಹಗಾರನ ಜೀವಸೆಲೆ..
ಇಷ್ಟವಾಯ್ತು....
ಬಹಳ ಚೆನ್ನಾಗಿದೆ ಕವಿತೆ.....